ಕಾಶಿ ಯಾತ್ರೆ ಎಂಬ ಪದವು ನನ್ನ ಚಿಕ್ಕಂದಿನಿಂದ ಬಹಳವಾಗಿ ಕೇಳಿಸಿಕೊಂಡು ಬಂದಿರುವಂತಹುದು. ಎಸ್.ಎಲ್. ಭ್ಯರಪ್ಪರವರ ಆವರಣ ಕಾದಂಬರಿಯಲ್ಲಿ ಬರುವ ಕಾಶಿಯ ವಿವರಣೆಯು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟತು. ಜೀವನದಲ್ಲಿ ಒಮ್ಮೆ ಆದರೂ ಕಾಶಿಯನ್ನು ನೋಡಿಯೇ ತೀರಬೇಕು ಎಂಬ ಆಸೆ ಮನಸ್ಸಿನಲ್ಲಿ ಚಿಗುರೊಡೆಯಿತು. ನಿಧಾನವಾಗಿ ಕಾಶಿಯ ಬಗ್ಗೆ ಅಂತರ್ಜಾಲದಲ್ಲಿ ಅಧ್ಯಯನ ಮಾಡಲು ತೊಡಗಿದಾಗ, ಕಾಶಿ ಎಂಬ ಬೃಹತ್ ಗ್ರಂಥದ ಒಂದೊಂದೇ ಪುಟವು ಎಳೆ ಎಳೆಯಾಗಿ ತೆರಿದುಕೊಂಡಿತು.
ಕಾಶಿ, ವಾರಾಣಸಿ, ಬನಾರಸ್ ಎಂದು ಕರೆಸಿಕೊಳ್ಳುವ ಈ ಪುಣ್ಯ ಸ್ಥಳದಲ್ಲಿ ಗಂಗೆಯು ಉತ್ತರಾಭಿಮುಖವಾಗಿ ಹರಿಯುವಳು. ಸಾಮಾನ್ಯಾವಾಗಿ ಗಂಗೆಯು ಸೇರಿದಂತೆ ಬಹುತೇಕ ನದಿಗಳು ದಕ್ಷಿಣಾಭಿಮುಖವಾಗಿ ಹರಿಯುವವು. ಕಾಶಿಯಲ್ಲಿ ಮಾತ್ರ ಪಾವನ ಗಂಗೆಯು ತನ್ನ ದಿಕ್ಕನ್ನು ಬದಲಿಸಿ ಪುನಃ ಉತ್ತರಾಭಿಮುಖವಾಗಿ ಹರಿಯುವಳು. ಕಾಶಿ ವಿಶ್ವನಾಥನ ದೇವಸ್ಥಾನ, ಗಂಗಾ ನದಿ ತೀರದ ಘಾಟ್ ಗಳು, ರಾಜ ಹರಿಶ್ಚಂದ್ರನ ಕಥೆಯ ಕ್ಲೈಮಾಕ್ಸ್ ನೆಡೆದಿದೆ ಎನ್ನಲಾದ ಹರಿಶ್ಚಂದ್ರ ಘಾಟ್, ಶಿವನು ಶಾಪ ನೀಡಿದ್ದರಿಂದ ಎಂದೂ ಆರದ ಚಿತೆಗಳಿಂದ ತುಂಬಿರುವ ಯಂದು ನಂಬಲಾದ ಮಣಿಕರ್ಣಿಕಾ ಘಾಟ್, ನೂರಾರು ದೇವಸ್ಥಾನಗಳು, ಸಾಧುಗಳು, ಸಂಜೆ ನಡೆಯುವ ಗಂಗಾ ಆರತಿ, ಇವುಗಳನ್ನಲ್ಲದೆ ಪ್ರಪಂಚದ ಅತ್ಯಂತ ಪ್ರಾಚೀನ ನಗರಗಳಲ್ಲಿ ಒಂದೆನಿಸುವ ಕಾಶಿಯು ವಿದೇಶಿಯರನ್ನು ಬಹಳವಾಗಿ ತನ್ನತ್ತ ಸೆಳೆದಿದೆ.
ಒಬ್ಬ ಒಳ್ಳೆಯ ಮಗನ ಹಾಗೆ ತಂದೆ ತಾಯಿಯನ್ನು ಕಾಶಿಯಾತ್ರೆಗೆ ಕರೆದೊಯ್ಯುವ ಮತ್ತು ವಿಮಾನದಲ್ಲಿ ಪ್ರಯಾಣಿಸುವ ತಾಯಯ ಆಸೆಯು ಪೂರ್ಣವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಪ್ರಯಾಣದ ದಿನವನ್ನು ನಿಗದಿಗೊಳಿಸಲು ತೊಡಗಿದೆ. ಅಪ್ಪನ ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆ ಆಗಿರುವ ಕಾರಣದಿಂದ ಕಾಶಿಗೆ ಬರಲೊಪ್ಪಲಿಲ್ಲ. ನಾನು ಮತ್ತು ಅಮ್ಮನು ಇಬ್ಬರಿಗೂ ಎರಡು ಟಿಕೆಟನ್ನು ಕಾಯ್ದಿರಿಸಿ ದಸರಾ ಹಬ್ಬದ ವಾರಾಂತ್ಯದಲ್ಲಿ ಹೂಗುವುದೆಂದು ನಿಶ್ಚಯವಾಯಿತು. ಕಾಶಿಗೆ ಬೆಂಗಳೂರಿನಿಂದ ನೇರ ಸಂಪರ್ಕವಿಲ್ಲ. ದೆಹಲಿಯ ಮಾರ್ಗವಾಗಿ ಪ್ರಯಾಣಿಸಬೇಕು. ಕಾಶಿ ತಲುಪಿದಾಗ ಮಧ್ಯಾಹ್ನ ೧೫:೩೦ ಘಂಟೆ. ಲಾಲ್ ಬಹಾದ್ದೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಾಶಿಯಿಂದ ೨೭ ಕಿ.ಮೀ ದೂರದಲ್ಲಿದೆ. ಮುಂಚಿತವಾಗಿ ಹೋಟೆಲ್ ಅಲ್ಕಾ ದಲ್ಲಿ ಕೋಣೆಗಳನ್ನು ಕಾಯ್ದಿರಿಸಿದ್ದೆವು. ಹೋಟೆಲ್ ಅಲ್ಕಾ ಗಂಗಾ ತೀರದ ಮೀರ್ ಘಾಟಿನಲ್ಲಿದೆ. ಇಲ್ಲಿಂದ ಗಂಗಾ ಆರತಿ ನಡೆಯುವ ದಶಾಶ್ವಮೇಧ ಘಾಟಿಗೆ ೫ ನಿಮಿಷದಲ್ಲೇ ನೆಡೆದು ಹೋಗಬಹುದು.
ನಾವು ಹೋದ ಸಮಯಕ್ಕೆ ನಾವು ಕಾಯ್ದಿರಿಸಿದ ಕೋಣೆಗಳು ಲಭ್ಯವಿಲ್ಲವಾದ್ದರಿಂದ ನಮ್ಮನ್ನು ಸೂಪರ್ ಡೀಲುಕ್ಸ್ ಕೋಣೆಗೆ ಅಪ್ಗ್ರೇಡ್ ಮಾಡಲಾಯಿತು, ಪುಕ್ಕಟ್ಟೆಯಾಗಿ. ಕೋಣೆಯ ಒಳ ಬಾಗಿಲು ತೆರೆದರೆ ಭವ್ಯವಾದ ಗಂಗಾ ನದಿಯ ದರ್ಶನ. ಗಂಗೆಯನ್ನು ನೋಡುತ್ತಿರುವಂತೆಯ ನನ್ನ ಮೈ ಪುಳಕಗೊಂಡು ಏನೋ ಒಂದು ಉಲ್ಲಾಸ ತುಂಬಿದ ಹಾಗಾಯಿತು. ಪ್ರಯಾಣದ ಆಯಾಸವೆಲ್ಲ ಒಂದೇ ಸಾರಿಗೆ ಮಾಯವಾಯಿತು. ಎಷ್ಟು ದೊಡ್ಡ ನದಿ. ಅದೆಷ್ಟು ಉದ್ಧ, ಅದೆಷ್ಟು ಅಗಲ, ಕಣ್ಣಿನ ನೋಟಕ್ಕೆ ಮೀರಿದ ಗಾತ್ರ , ನೀಲಿ ಬಣ್ಣ, ದೋಣಿಗಳು, ಅನೇಕ ಪುರಾಣಗಳಲ್ಲಿ ಚರ್ಚಿತವಾಗಿರುವ ಈ ನದಿ, ಈ ಸ್ಥಳ ಶಿವನ ವಾಸಸ್ಥಳವಾಗಿತ್ತು ಎಂಬುದಕ್ಕೆ ಪುರಾವೆಯಂತಿದ್ದವು. ಸಂಜೆ ೧೮:೩೦ ಕ್ಕೆ ಗಂಗಾ ಆರತಿ ಶುರುವಾಗುತ್ತದೆಂದು ತಿಳಿದು ೧೮:೧೫ ಕ್ಕೆ ದಶಾಶ್ವಮೇಧ ಘಾಟಿಗೆ ತಲುಪಿದೆವು. ಸರಿಯಾಗಿ ೧೮:೩೦ ಕ್ಕೆ ಆರತಿ ಶರುವಾಯಿತು. ೭ ಮಂದಿ ವೇದಾಭ್ಯಾಸ ಮಾಡುತ್ತಿರುವ ಪಂಡಿತರು ಒಂದೇ ಧಾಟಿಯಲ್ಲಿ ಮಂತ್ರ ಗೋಷಗಳ ಮೂಲಕ ಗಂಗಾ ಆರತಿಯನ್ನು ಪ್ರಾರಂಭಿಸಿದರು. ಸುಮಾರು ೩೦ ನಿಮಿಷ ನೆಡೆದ ವೈವಿಧ್ಯಮಯ ಗಂಗಾ ಆರತಿ ನೂರಾರು ಜನರಿಂದ ಘಂಟಾಘೋಷವಾಗಿ ಹರಿದ ಹರ ಹರ ಮಹದೇವ್ ಎಂಬ ಮಂತ್ರದಿಂದ ಕೊನೆಗೊಂಡಿತು.
ಕಾಶಿ ವಿಶ್ವನಾಥನ ದೇವಸ್ಥಾನವು ಬೆಳಿಗ್ಗೆ ೩:೦೦ ಘಂಟೆಗೆ ನೆಡೆಯುವ ಮಂಗಳಾರತಿಯ ಮೂಲಕ ಯತ್ರಾರ್ಥಿಗಳಿಗೆ ತೆರೆದುಕೊಳ್ಳುತದೆ. ಈ ಸಮಯದಲ್ಲಿ ದರ್ಶನ ಪಡೆಯಲು ಟಿಕೆಟನ್ನು ೧೫ ದಿನಗಳ ಮುಂಚಿತವಾಗಿ ಅಂತರ್ಜಾಲದಲ್ಲಿ ಕಾಯ್ದಿರಿಸಬಹುದು. ನಾವು ದೇವಸ್ಥಾನ ತಲುಪಿದಾಗ ೩:೦೦ ಘಂಟೆಯಾಗಿತ್ತು. ಅದಾಗಲೇ ಜನರು ಗರ್ಭಗುಡಿಯ ಮುಂದೆ ಆಸೀನರಾಗಿದ್ದರು. ಕಾಶಿ ವಿಶ್ವನಾಥನ ಲಿಂಗವು ನೆಲಮಟ್ಟದಿಂದ ೩ ಅಡಿ ಕೆಳಗಿದೆ. ಅಭಿಷೇಕ ಮತ್ತು ಮಂಗಳಾರತಿಯ ನಂತರ ಎಲ್ಲ ಭಕ್ತಾಧಿಗಳಿಗೆ ದರ್ಶನದ ಅವಕಾಶ ಮಾಡಿಕೊಡಲಾಯಿತು. ಹಲವಾರು ಭಕ್ತಾಧಿಗಳು ಹಾಲು, ಗಂಗಾ ಜಾಲವನ್ನು ತಮ್ಮೊಡನೆ ವಿಶ್ವನಾಥನ ಲಿಂಗಕ್ಕೆ ಅಭಿಷೇಕ ಮಾಡಲು ತಂದಿದ್ದರು. ದಕ್ಷಿಣ ಭಾರತದ ಪದ್ಧತಿಗೆ ವಿರುದ್ಧವಾಗಿ ಕಾಶಿಯಲ್ಲಿ ಎಲ್ಲರಿಗೂ ಪ್ರಧಾನ ಮೂರ್ತಿಯನ್ನು ತಮ್ಮ ಕೈಯಾರೆ ಮುಟ್ಟಲಿಕ್ಕೆ ಅವಕಾಶವಿದೆ. ದರ್ಶನದ ನಂತರ ದೇವಸ್ಥಾನದ ಆವರಣದೊಳಗೆ ಕುಳಿತುಕೊಳ್ಳುವುದಕ್ಕೆ ಅವಕಾಶವಿದೆ. ಬಲವಂತವಾಗಿ ಯಾರನ್ನು ಹೊರಗೆ ಕಳಿಸುವವರಿಲ್ಲ. ನೆಮ್ಮದಿಯಾಜಿ ಕುಳಿತು ದೇವರ ಧ್ಯಾನ ಮಾಡಬಹುದು. ಬೆಳಿಗ್ಗೆ ೫:೩೦ ಕ್ಕೆ ಗಂಗಾ ನದಿಯ ದೋಣಿಗಳು ಕಾರ್ಯಾಚರಣೆ ಮಾಡಲಾರಂಭಿಸುತ್ತವೆ. ಕಾಶಿಗೆ ಬರುವ ಎಲ್ಲರೂ ಕೂಡ ಗಂಗಾ ನದಿಯ ಮುಂಜಾನೆಯ ದೋಣಿ ವಿಹಾರದಲ್ಲಿ ಸೂರ್ಯೋದಯ ನೋಡಲು ಮರೆಯುವುದಿಲ್ಲ. ಮುಂಜಾನೆಯಲ್ಲಿ ನದಿಯ ಕಡೆಯಿಂದ ಅಷ್ಟೂ ಘಾಟ್ಗಳನ್ನು ನೋಡುವುದು ಒಂದು ವಿಶಿಷ್ಟವಾದ ಅನುಭವ. ಮುಂಜಾನೆಯ ಗಂಗಾ ನದಿಯ ಅನುಭವ ನಿಜಕ್ಕೂ ಅವಿಸ್ಮರಣೀಯ .
ಮಾರನೆಯ ದಿನ ಭೌದ್ಧ ಸ್ಥಳವಾದ ಸಾರಾನಾಥ್ ಗೆ ಪ್ರಯಾಣ ಬೆಳೆಸಿದೆವು. ಕಾಶಿಯಿಂದ ೧೩ ಕಿ.ಮೀ ದೂರವಿರುವ ಸಾರಾನಾಥ್ ಭೌದ್ಧರಿಗೆ ಒಂದು ಪ್ರಮುಖ ಸ್ಥಳ. ಭಗವಾನ್ ಬುದ್ಧನಿಗೆ ಜ್ಞಾನೋದಯವಾದ ಮೇಲೆ ಆತನು ನೀಡಿದ ಪ್ರಪ್ರಥಮ ಧರ್ಮಭೋದನೆ ಸಾರಾನಾಥಿನಲ್ಲಿ ಎಂಬುದೊಂದು ಪ್ರತೀತಿ. ಹಾಗಾಗಿ ಸಾಮ್ರಾಟ್ ಅಶೋಕನು ಇಲ್ಲಿ ಹಲವಾರು ಸ್ತೂಪಗಳನ್ನು ೨೩೦೦ ವರ್ಷಗಳ ಹಿಂದೆ ಕಟ್ಟಿಸಿದ್ದಾನೆ. ಅತಿ ಮುಖ್ಯವಾದ ಎರಡು ಸ್ತೂಪಗಳಾದ ಧಾಮೆಕ್ ಸ್ತೂಪ ಮತ್ತು ಚೌಖಂಡಿ ಸ್ತೂಪ. ಧಾಮಿಕ್ ಸ್ತೂಪದ ಬಳಿಯೇ ವಿಶಾಲವಾದ ಹಲವು ದೇವಸ್ಥಾನಗಳಿದ್ದಂತಹ ಕುರುಹುಗಳಿವೆ. ನಮ್ಮ ದೇಶದ ರಾಷ್ಟ್ರ ಲಾಂಛನವನ್ನು ಹೊತ್ತಿಕೊಂಡ ಅಶೋಕ ಪಿಲ್ಲರ್ ಸಿಕ್ಕಿದ್ದು ಈ ಸ್ಥಳದಲ್ಲಿಯೇ. ಚೌಖಂಡಿ ಸ್ಥೂಪವು ಇಲ್ಲಿಂದ ೧ ಕಿ.ಮೀ ದೂರದಲ್ಲಿದೆ. ಧಾಮಿಕ್ ಸ್ಥೂಪದ ಹೊರಗಡೆ ಭಾರತೀಯ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯವಿದೆ. ಇಲ್ಲಿ ನೀವು ಧಾಮಿಕ್ ಸ್ತೂಪದ ಬಳಿಯಲ್ಲಿ ದೊರೆತ ಫಳ ಫಳ ಹೊಳೆಯುವ ೪ ಸಿಂಹ, ೧ ಆನೆ, ೧ ಎತ್ತು ಮತ್ತು ಅಶೋಕ ಚಕ್ರವಿರುವ ನಮ್ಮ ರಾಷ್ಟ್ರ ಲಾಂಛನ ವನ್ನು ಕಾಣಬಹುದು. ಜೊತೆಗೆ ಹಲವಾರು ಭೌದ್ಧ ವಿಗ್ರಹಗಳನ್ನು ನೋಡಬಹುದು.
ಹಲವಾರು ನೆನಪಿನೊಂದಿಗೆ ವಾರಾಣಸಿಯನ್ನು ಬಿಟ್ಟು ಹೈದೆರಾಬಾದ್ ಮೂಲಕವಾಗಿ ಬೆಂಗಳೂರಿಗೆ ಬಂದಾಗ ಬೆಳಗಿನ ಜಾವ ೧ ಘಂಟೆ. ಗಂಗಾ ನದಿಯ ನೋಟ, ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅನುಭವಿಸಿದ ಭಕ್ತಿಯ ಪರಾಕಾಷ್ಠೆ, ಸಾರಾನಾಥ್ ನ ಐತಿಹಾಸಿಕ ಸ್ಥಳಗಳು, ನಮ್ಮ ಜೀವನದ ಎಂದೂ ಮರೆಯದ ನನಪಾಗಿ ಉಳಿಯುವುದು ನಿಶ್ಚಿತ.